ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿ.
ಧಾಮಿ೯ಕ ಮುಖಂಡರ ಧರಣಿಗೆ ಬೆಂಬಲ.
ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧಕ್ಕೆ ರಾಜ್ಯ ಸರಕಾರದ ಕಾರ್ಯದರ್ಶಿಗಳ ಅಧಿಕಾರಿಗಳ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸುವ ಮೂಲಕ ಸುವರ್ಣ ಸೌಧವನ್ನು ಶಕ್ತಿ ಕೇಂದ್ರವನ್ನಾಗಿಸುವಂತೆ ಆಗ್ರಹಿಸಿ ನಡೆಸಲಾಗುತ್ತಿರುವ ಹೋರಾಟವನ್ನು ಬೆಂಬಲಿಸಿ ಉತ್ತರ ಕರ್ನಾಟಕದ ಮಠಾಧೀಶರು ಸುವರ್ಣ ಸೌಧದ ಮುಂದೆ ಸಾಂಕೇತಿಕ ಧರಣಿ ನಡೆಸಲಿದ್ದಾರೆ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಮುಖಂಡ ಅಶೋಕ ಪೂಜಾರಿ ತಿಳಿಸಿದ್ದಾರೆ.
ಶುಕ್ರವಾರದಂದು ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜುಲೈ 31 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿರುವ ಧರಣಿ ಸತ್ಯಾಗ್ರಹದಲ್ಲಿ ಉತ್ತರ ಕರ್ನಾಟಕದ ನೂರಾರು ಮಠಾಧೀಶರು ಭಾಗವಹಿಸಲಿದ್ದಾರೆ. ಮಠಾಧೀಶರ ಧರಣಿಯ ನಿರ್ಧಾರದಿಂದ ವೇದಿಕೆಯ ಹೋರಾಟಕ್ಕೆ ಇನ್ನಷ್ಟು ಬಲಬಂದಂತಾಗಿದೆ. ಮಠಾಧೀಶರ ಧರಣಿಗೆ ಈ ಭಾಗದ ಜನ ಪಕ್ಷಾತೀತ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಇತ್ತೀಚೆಗೆ ನಡೆದ ರಾಜ್ಯ ವಿಧಾನ ಮಂಡಳದ ಅಧಿವೇಶನದ ವೇಳೆ ಈ ಭಾಗದ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುವರ್ಣ ಸೌಧದ ಮುಂದೆ ಧರಣಿ ನಡೆಸಿದ ಪರಿಣಾಮದಿಂದ ಅಧಿವೇಶನದ ವೇಳೆ ಈ ಭಾಗದ ಅನೇಕ ಮುಖಂಡರುಗಳು ಈ ಭಾಗಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ಸರಕಾರದಿಂದ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ಲಭಿಸಿಲ್ಲ. ಸರಕಾರದ ಮೇಲೆ ಒತ್ತಡ ಹೇರಲು ಮಠಾಧೀಶರ ಧರಣಿ ಫಲ ನೀಡಬಹುದು ಎಂಬ ನಿರೀಕ್ಷೆ ಇದೆ ಎಂಬ ಆಶಾ ಭಾವನೆಯನ್ನು ವ್ಯಕ್ತ ಪಡಿಸಿದರು.
ಇನ್ನೋರ್ವ ಮುಖಂಡ ಭೀಮಪ್ಪ ಗಡಾದ ಮಾತನಾಡಿ, ಉತ್ತರ ಕರ್ನಾಟಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ನಾವು ಹೋರಾಟ ಮಾಡುತ್ತಿದ್ದರೇ, ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿಲ್ಲ ಎಂದು ದಕ್ಷಿಣ ಭಾಗದ ನಾಯಕರುಗಳು ಹೇಳುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಗೊಂದಲವನ್ನು ನಿವಾರಿಸಲು ದಕ್ಷಿಣ ಕರ್ನಾಟಕಕ್ಕೆ ಎಷ್ಟು ಮತ್ತು ಉತ್ತರ ಕರ್ನಾಟಕಕ್ಕೆ ಎಷ್ಟು ಅನುದಾನ ಖರ್ಚು ಮಾಡಲಾಗಿದೆ ಎಂಬುದರ ಬಗ್ಗೆ ರಾಜ್ಯ ಸರಕಾರ ತಕ್ಷಣ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಶ್ವೇತಪತ್ರದಲ್ಲಿ ಈ ಭಾಗಕ್ಕೆ ಅನ್ಯಾಯ ಆಗಿಲ್ಲ ಎಂಬುದು ಸಾಬೀತಾದರೆ ಹೋರಾಟವನ್ನು ಕೈ ಬಿಡುವದಾಗಿ ಹೇಳಿದ ಅವರು, ಈ ಭಾಗಕ್ಕೆ ಪ್ರತಿಯೊಂದು ಕೇತ್ರಕ್ಕೆ ಅನ್ಯಾಯ ಆಗಿದೆ. ಆಗಿರುವ ಅನ್ಯಾಯವನ್ನು ಸರಿಪಡಿಸುವದರ ಬದಲು ಗೊಂದಲ ಮೂಡಿಸುತ್ತಿರುವದು ಸರಿ ಅಲ್ಲ. ಅನ್ಯಾಯ ಮುಂದುವರೆದರೆ ಪ್ರತ್ಯೇಕ ರಾಜ್ಯದ ಹೋರಾಟ ಅನಿವಾರ್ಯ ಆಗಲಿದೆ ಎಂದರು.
ಕಲ್ಯಾಣರಾವ ಮುಚಳಂಬಿ ಮಾತನಾಡಿ, ಉತ್ತರ ಕರ್ನಾಟಕದ ಜನರ ಹೋರಾಟದ ಪರಿಣಾಮವಾಗಿ ರಾಜ್ಯ ಸರಕಾರ ನಂಜುಂಡಪ್ಪ ವರದಿ ಪಡೆದಿತ್ತು. ಆ ವರದಿಯಲ್ಲಿ ಈ ಭಾಗಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ವಿವರಿಸಲಾಗಿತ್ತು. ಅನ್ಯಾಯವನ್ನು ಸರಿಪಡಿಸಲು ವರದಿ ನೀಡಲಾಗಿದ್ದ ಸಲಹೆಗಳನ್ನೂ ರಾಜ್ಯ ಸರಕಾರ ಜಾರಿಗೆ ಮಾಡಲಿಲ್ಲ. ಇಂದಿಗೂ ಅನ್ಯಾಯ ಮುಂದುವರೆದಿದೆ ಎಂದರು.
ಆರ್.ಎಸ್.ದರ್ಗೆ, ಟಿ.ಟಿ.ಮುರಕಟ್ನಾಳ, ನಾಗೇಶ ಗೋಲಶೆಟ್ಟಿ, ನಿಲೇಶ ಬನ್ನೂರ, ಎಂ.ಟಿ.ಪಾಟೀಲ, ದೀಪಕ ರಾಯಣ್ಣವರ, ಮಹೇಶ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
